ವಿಜಯಪುರ: ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ನಾಯಕರ ಆಂತರಿಕ ಕಲಹ ಸ್ಫೋಟಗೊಂಡಿದ್ದು, ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಎದುರಲ್ಲೇ ಪಕ್ಷದ ಮುಖಂಡರು ಮಾತಿನ ಚಕಮಕಿ ನಡೆಸಿದ್ದಾರೆ.
ನಿನ್ನೆ ಸಂಜೆ ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ ಶಾಸಕರ ಬೆಂಬಲಿಗರ ಮಧ್ಯೆ ನಡುರಸ್ತೆಯಲ್ಲಿಯೇ ವಾಗ್ವಾದ ನಡೆದಿದ್ದು, ಜಗಳ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು.
ಶಾಸಕ ಸೋಮನಗೌಡ ಸ್ಥಳೀಯ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲಾ. ನಮ್ಮ ಕರೆಗಳನ್ನು ಸ್ವೀಕರಿಸಲ್ಲಾ ಎಂದು ಬಿಜೆಪಿ ಮಂಡಳ ಉಪಾಧ್ಯಕ್ಷ ಮುತ್ತುರಾಜ ಆರೋಪಿಸಿದ್ದಾರೆ. ಈ ವೇಳೆ ಶಾಸಕರ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಕೂಡ ಕೆಲ ಕಾಲ ಸಹನೆ ಕಳೆದುಕೊಂಡಿದ್ದರು. ಗಲಾಟೆ ಅತಿರೇಕಕ್ಕೇ ಹೋಗುತ್ತಿದ್ದಂತೆ ಸ್ಥಳದಲ್ಲಿದ್ದ ಇತರ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.