ತುಮಕೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪರ 150 ಅಡಿಗೂ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣವಾಗಲಿದೆ ಎಂದು ತುಮಕೂರು ಸಂಸದ ಜಿ.ಎಸ್ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ನೀರಾವರಿ ಯೋಜನೆಗಳನ್ನು ಸಿಎಂ ಯಶಸ್ವಿಗೊಳಿಸಿದರೆ, ಗುಜರಾತ್ನಲ್ಲಿ ಸರ್ದಾರ್ ವಲ್ಲಭಾಯ್ ಪಟೇಲರ ಪ್ರತಿಮೆ 360 ಅಡಿ ಎತ್ತರ ಇದೆ. ಅವರಂತೆ ಯಡಿಯೂರಪ್ಪರ ಪ್ರತಿಮೆ ನಿರ್ಮಾಣವಾಗಲಿದೆ ಎಂದರು.
ಸರ್ಕಾರ ನೇತ್ರಾವತಿ ಕುಮಾರಧಾರ ಸಂಗಮವಾಗುವ ಜಾಗದಲ್ಲಿ ಅಣೆಕಟ್ಟು ಕಟ್ಟಿ 200 ಟಿಎಂಸಿ ನೀರು ತರುವ ಮೆಗಾ ಪ್ಲಾನ್ ಮಾಡುತ್ತಿದ್ದೇವೆ. ಅದೇ ರೀತಿ ಉತ್ತರ ಕರ್ನಾಟಕಕ್ಕೂ ಅಘನಾಶಿನಿ, ಬೇಡ್ತಿ ನದಿಗಳ 130 ಟಿಎಂಸಿ ನೀರು ಕೊಡುವ ಪ್ರಯತ್ನ ಮಾಡುತ್ತೇವೆ. 36 ಸಾವಿರ ಕೆರೆಗಳು ತುಂಬಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಇವುಗಳೆಲ್ಲವನ್ನು ಮಾಡಿದರೆ ರೈತ ಇನ್ನು ಐವತ್ತು ವರ್ಷಗಳ ಕಾಲ ಬದುಕುತ್ತಾನೆ. ಎತ್ತಿನಹೊಳೆ ಯೋಜನೆಗೆ ಕುಮಾರಧಾರ ನದಿಯ 6.5 ಟಿಎಂಸಿ ನೀರು ಕೊಡಿಸುವ ಪ್ರಯತ್ನ ಮಾಡಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಯಶಸ್ವಿ ಮಾಡಬೇಕು ಎಂದರು.