ಮಹಾರಾಷ್ಟ್ರ: ಚುನಾವಣೆ ಅಖಾಡದಲ್ಲಿ ವೀರ ಸಾವರ್ಕರ್ ಹೆಸರು ಸಖತ್ ಸೌಂಡ್ ಮಾಡ್ತಿದೆ. ಮತ್ತೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದರೆ ಸಾವರ್ಕರ್ ಹೆಸರನ್ನು ಭಾರತ ರತ್ನ ಪುರಸ್ಕಾರಕ್ಕೆ ಶಿಫಾರಸು ಮಾಡ್ತೀವಿ ಅಂತ ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಿಸಿರೋದೇ ಇದಕ್ಕೆ ಕಾರಣ. ಇದು ಕಾಂಗ್ರೆಸ್ – ಬಿಜೆಪಿ ನಡುವೆ ಸೈದ್ಧಾಂತಿಕ ಸಂಘರ್ಷಕ್ಕೂ ನಾಂದಿಯಾಡಿದೆ. ತನ್ನ ನಡೆಯನ್ನು ಬಿಜೆಪಿ ಸಮರ್ಥಿಸಿಕೊಂಡ್ರೆ, ಕಾಂಗ್ರೆಸ್ ಮುಖಂಡರು ಸಾಲು ಸಾಲಾಗಿ ಪ್ರಧಾನಿ ಮೋದಿ ವಿರುದ್ಧ ಮುಗಿಬಿದ್ದಿದಾರೆ.
ಸಾವರ್ಕರ್ಗೆ ಭಾರತ ರತ್ನ ನೀಡುವ ಬಿಜೆಪಿಯ ಪ್ರಸ್ತಾವಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಹೆಸರೂ ಇತ್ತು ಎಂಬುದನ್ನು ಬಿಜೆಪಿ ಮರೆಯಬಾರದು ಎಂದಿದ್ದಾರೆ. ಅವರ ಬದುಕಿನಲ್ಲಿ ಎರಡು ಆಯಾಮಗಳಿದ್ದವು. ಒಂದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದದ್ದು, ಮತ್ತೊಂದು ಬ್ರಿಟಿಷರ ಕ್ಷಮೆ ಕೋರಿ ವಾಪಸಾದದ್ದು ಎಂದು ಹೇಳಿದ್ದಾರೆ.
ಇತ್ತ, ಮಹಾರಾಷ್ಟ್ರದ ನಾಗ್ಪುರದಲ್ಲಿ ಮಾತನಾಡಿದ ಕಾಂಗ್ರೆಸ್ನ ಮತ್ತೊಬ್ಬ ನಾಯಕ ಮನೀಶ್ ತಿವಾರಿ, ಸಾವರ್ಕರ್ ಬದಲಿಗೆ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಬಾರದೇಕೆ..? ಎಂದು ವ್ಯಂಗ್ಯವಾಡಿದ್ದಾರೆ. ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಆರೋಪಿಯಷ್ಟೇ ಆಗಿದ್ದರು. ಆದರೆ, ಗೋಡ್ಸೆ ಹತ್ಯೆಯನ್ನೇ ಮಾಡಿದ್ದಾರೆ. ಈ ವರ್ಷ ಗಾಂಧಿಯವರ 150ನೇ ಜನ್ಮ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ಎನ್ಡಿಎ ಸರ್ಕಾರ ಸಾವರ್ಕರ್ ಬದಲಿಗೆ ಗೋಡ್ಸೆಗೆ ಭಾರತ ರತ್ನ ನೀಡಲಿ ಎಂದು ಲೇವಡಿ ಮಾಡಿದ್ದಾರೆ.
ಆದರೆ, ಸಾವರ್ಕರ್ ಅವರನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ವರಿಷ್ಠ ಅಮಿತ್ ಶಾ, ಸಾವರ್ಕರ್ ಒಬ್ಬ ಸ್ವಾತಂತ್ರ್ಯ ಸೇನಾನಿ. 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು ಎಂದಿದ್ದಾರೆ.
ಇನ್ನು, ಮಹಾರಾಷ್ಟ್ರದ ಸತಾರಾದಲ್ಲಿ ಕ್ಯಾಂಪೇನ್ ನಡೆಸಿದ ಪ್ರಧಾನಿ ಮೋದಿ, ಅದು ಮಹಾರಾಷ್ಟ್ರ ಆಗಲಿ, ಹರಿಯಾಣ ಆಗಿರಲಿ ಅಥವಾ ಮುಂಬರುವ ಎಲ್ಲ ಚುನಾವಣೆಗಳೇ ಆಗಲಿ. ಕಾಂಗ್ರೆಸ್ನನ್ನು ಮತದಾರರು ತಿರಸ್ಕರಿಸಲಿದ್ದಾರೆ ಎಂದಿದ್ದಾರೆ. ಆರ್ಟಿಕಲ್ 370 ಹಾಗೂ ಸಾವರ್ಕರ್ ಬಗ್ಗೆ ಅಪಪ್ರಚಾರದಿಂದ ಜನರ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಿದೆ ಅಂತಲೂ ಹೇಳಿದ್ದಾರೆ.
ಅತ್ತ, ಹರಿಯಾಣದ ಭಿವಾನಿಯಲ್ಲಿ ಪ್ರಚಾರ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಫೇಲ್ ಪೂಜೆ ಟೀಕಿಸಿದ್ದ ಕಾಂಗ್ರೆಸ್ಗೆ ಟಾಂಗ್ ಕೊಟ್ಟಿದ್ದಾರೆ. ಆಯುಧಪೂಜೆ ನೆರವೇರಿಸೋದು ನಮ್ಮ ಸಂಪ್ರದಾಯ. ಅದರಲ್ಲಿ ತಪ್ಪೇನಿದೆ..? ಓಂ ಎಂದು ಬರೆಯದೇ ಇನ್ನೇನು ಬರೆಯಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಮತದಾನಕ್ಕೆ ಇನ್ನು ಕೇವಲ ಮೂರು ದಿನ ಮಾತ್ರ ಬಾಕಿ ಇದ್ದು, ಇದಕ್ಕೂ ಮೊದಲೇ ಭಾವನಾತ್ಮಕ, ಧಾರ್ಮಿಕ ಹಾಗೂ ಸೈದ್ಧಾಂತಿಕ ವಿಚಾರಗಳು ಮುನ್ನೆಲೆಗೆ ಬಂದಿವೆ. ಇವುಗಳು ಯಾವುದು ಯಾರ ಕೈಹಿಡಿಯುತ್ತೆ ಅಂತ ಅಕ್ಟೋಬರ್ 24ರಂದು ಬಹಿರಂಗವಾಗಲಿದೆ.