ಉಪಸಭಾಪತಿಯ ಕತ್ತು ಹಿಡಿದು ಎಳ್ಕೊಂಡು ಹೋಗಿದ್ದು ಇತಿಹಾಸದಲ್ಲೇ ಇಲ್ಲ
ನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ
ಬೆಂಗಳೂರು: ಒಂದು ಸಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಮೇಲೆ ಅಲ್ಲಿ ಕೂರಲು ನಿಮಗೆ ಅರ್ಹತೆ ಇಲ್ಲ, ಕಾಂಗ್ರೆಸ್ನವರು ಬಹುಮತ ಇಲ್ಲ ಎಂದಾದ ಮೇಲೆ ರಾಜೀನಾಮೆ ಬಿಸಾಕಿ ಹೋಗಬೇಕಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.
ಇಂದು ವಿಧಾನ ಪರಿಷತ್ನಲ್ಲಿ ನಡೆದ ಗೆದ್ದಲ ಹಿನ್ನೆಲೆ ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಹಾಲಿ ಸಭಾಪತಿಗಳಿಗೆ ಜೆಡಿಎಸ್ ಬಹಿರಂಗವಾಗಿ ಅವಿಶ್ವಾಸ ನಿರ್ಣಯಕ್ಕೆ ಬೆಂಬಲಿಸಿದ್ದಾರೆ. ಬೆಂಬಲ ಇಲ್ಲದ ಮೇಲೆ, ಬಹುಮತ ಇಲ್ಲದ ಮೇಲೆ, ಕಾಂಗ್ರೆಸ್ನವರ ಕರ್ತವ್ಯ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು. ಕಾನೂನಿನ ಚೌಕಟ್ಟಿನ ಪ್ರಕಾರ, ಒಂದು ಸಾರಿ ನಿಮ್ಮ ಮೇಲೆ ಅವಿಶ್ವಾಸ ನಿರ್ಣಯ ಆದ ಮೇಲೆ ನಿಮಗೆ ಆ ಕುರ್ಚಿಯಲ್ಲಿ ಕೂರಲು ಅರ್ಹತೆಯಿಲ್ಲ. ಇದು ಇಡೀ ಜಗತ್ತಿಗೆ ಗೊತ್ತಿದೆ. ಸುಪ್ರೀಂಕೋರ್ಟ್ನಲ್ಲಿ ಈ ಬಗ್ಗೆ ಅನೇಕ ತೀರ್ಮಾನಗಳಿದ್ದಾವೆ ಎಂದರು.
ಇನ್ನು ನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ. ಅವಿಶ್ವಾಸ ನಿರ್ಣಯ ಮಂಡನೆ ಆದ ಮೇಲೆ ಉಪಸಭಾಪತಿಗಳೇ ಮುಂದುವರೆಯುತ್ತಾರೆ. ಬೆಲ್ ಆದ ಮೇಲೆ ಬಂದರು ಮೊದಲು ಬಂದು ಅದೆಲ್ಲಾ ಮುಖ್ಯವಲ್ಲ. ಬಹುಮತ ಇಲ್ಲ ಅನ್ನುವುದೇ ಮುಖ್ಯ. ಉಪಸಭಾಪತಿಗಳನ್ನು ಕತ್ತು ಹಿಡಿದು ಎಳೆದಾಡಿದದ್ದು ದೇಶದ ಇತಿಹಾದಲ್ಲೆ ಮೊದಲು. ಇದು ಕಾಂಗ್ರೆಸ್ನವರ ಸಂಸ್ಕೃತಿಯನ್ನು ತೋರಿಸುತ್ತೆ. ಕಾಂಗ್ರೆಸ್ನವರು ಸಭಾಪತಿಗಳಿಗೆ ಹೇಳಿ ರಾಜೀನಾಮೆ ಬಿಸಾಕಕ್ಕೆ ಹೇಳಿ. ರಾಜ್ಯಪಾಲರಿಗೆ ಮೆರವಣಿಗೆಯಲ್ಲಿ ಹೋಗಿ ಜೆಡಿಎಸ್-ಬಿಜೆಪಿಯ ಪರಿಷತ್ ಸದಸ್ಯರು ಮನವಿ ಕೊಡ್ತಾರೆ. ಇಲ್ಲಿ ನಡೆದ ಪ್ರತಿಯೊಂದು ಘಟನೆ ರಾಜ್ಯಪಾಲರಿಗೆ ಹೇಳ್ತಾರೆ ಎಂದು ಸಿಎಂ ಬಿಎಸ್ವೈ ಹೇಳಿದರು.